ಪಶುಪತಿನಾಥ ಮಂದಿರ ಅಂದರೆ ಶಿವ ನೇಪಾಳಿಗಳ ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ. ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. ಕಠ್ಮಂಡುವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.