ಇದು ಆಫ್ರಿಕಾ ಖಂಡದ ಕೀನ್ಯಾ ಮತ್ತು ಟಾಂಜಾನಿಯ ದೇಶದಲ್ಲಿರುವ 'ರಾಷ್ಟ್ರೀಯ ಉದ್ಯಾನ'. ಈ ಉದ್ಯಾನ ಸುಮಾರು ೩೦,೦೦೦ ಚದರ ಕಿ.ಮೀನಷ್ಟು ವ್ಯಾಪಿಸಿದೆ.
ಸನ್, ೧೯೧೩ ರಲ್ಲೂ ಆಫ್ರಿಕದ ಹೆಚ್ಚು ವ್ಯಾಪ್ತಿಯಲ್ಲಿನ ಸ್ಥಳಗಳು ಬಿಳಿಯರಿಗೆ ಲಭ್ಯವಾಗಿರಲಿಲ್ಲ. ಸ್ಟೀವರ್ಟ್ ಎಡ್ವರ್ಡ್ ವೈಟ್ ಎಂಬ ಅಮೆರಿಕದೇಶದ ಬೇಟೆಗಾರ, ನೈರೋಬಿಯಿಂದ ದಕ್ಷಿಣದ ಕಡೆಗೆ ಹೊರಟನು. ’ನಾನು ಮೈಲಿಗಟ್ಟಲೆ ನಡೆದು ಕಾಡನ್ನು ಕಡಿಯುತ್ತಾ, ಬೆಂಕಿ ಹಚ್ಚುತ್ತಾ ಹೋಗಿ ಹೋಗಿ, ಕೊನೆಗೆ ಅಲ್ಲಿನ ಒಂದು ವಿಶಾಲವಾದ ನದಿಯ ದಡದಲ್ಲಿ ಹಚ್ಚ ಹಸುರಿನ ಮರಗಳನ್ನು ಕಂಡೆ. ಅಲ್ಲಿಂದ ನಾನು ನಡೆದದ್ದು ಕೇವಲ ೨ ಮೈಲಿಗಳಿರಬಹುದು. ಓಹ್ ಅಲ್ಲಿ ನಾನು ಕಂಡಿದ್ದು ಸ್ವರ್ಗಕ್ಕಿಂತ ಮಿಗಿಲಾದ ವನಸೌಂದರ್ಯ; ಸುತ್ತಲೂ ಬೆಟ್ಟಗಳು, ಚಿಕ್ಕ ಪುಟ್ಟ ಝರಿಗಳು ಕಣ್ಣಿಗೆ ಕಾಣುವಷ್ಟು ಜಾಗದಲ್ಲಿ ಹಚ್ಚ ಹಸುರಿನ ಹುಲ್ಲುಗಾವಲುಗಳು, ನೆಗೆದಾಡುವ ಝೀಬ್ರಗಳು. ಅದೇ ಸೆರೆಂಗೇಟಿ ಅಭರಾರಣ್ಯ. ಸ್ವರ್ಗಕ್ಕೆ ಸರಿ ಸಮಾನವಾದ ವನಸಿರಿ, ಸಂಪತ್ತು", ಬಿಳಿಯರು ಕಂಡುಕೊಂಡ ಸ್ಥಳ ಆಫ್ರಿಕದ ಮೋಡಗಳೇ ಇಲ್ಲದ ನೀಲಿ ಆಗಸ. 'ಮಸೈ ಬುಡಕಟ್ಟಿನ ಜನ' ತಮ್ಮ ದನಕರುಗಳನ್ನು ಅಲ್ಲಿನ ಹುಲ್ಲುಗಾವಲಿನಲ್ಲಿ ಬಿಟ್ಟುದಣಿವಾರಿಸಿಕೊಳ್ಳುತ್ತಿದ್ದರು. ಅವರಿಗೆ ಅದು ಸಿರಿಂಗಿಟು ಭೂಭಾಗ ಯಾವಾಗಲೂ ಚಲಿಸಿ ಬದಲಾಗುವ ಒಂದು ಪರಿಸರ.
’ಸೆರೆಂಗೆಟಿ ನ್ಯಾಷನಲ್ ಪಾರ್ಕ್,' ಇರುವ ಜಾಗವೆಲ್ಲಾ ಅದೆ ಹೆಸರಿನ 'ನಾರೋಂಗೊರೊ ಪ್ರಾಣಿ-ವನ ಸಂರಕ್ಷಣಾಲಯ ವಲಯ'ವಿದೆ. 'ಮೊಸ್ವ ಪಕ್ಷಿ ಸಂರಕ್ಷಣ ವಲಯ', ಲೊಲಿಒಂಡೊ, ಗ್ರುಮೆಟಿ ಮತ್ತು ಇಕೊರೊಂಗೊ ಜನ ಸಮುದಾಯ ಸ್ಥಳ ಕೆನ್ಯಾದ ಮಾಸೈ ಮರ ನ್ಯಾಷನಲ್ ರೆಸರ್ವ್ ಪಾರ್ಕ್. ಪ್ರತಿವರ್ಷವೂ ಸುಮಾರು ೯೦ ಸಾವಿರಕ್ಕೂ ಹೆಚ್ಚು ಪರ್ಯಟಕರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಸುಮಾರು ೩೦ ಚದರ ಕಿಮಿ ನಲ್ಲಿ 'ವಿಶ್ವದ ಹೆರಿಟೇಜ್ ಸೈಟ್ ಗಳು' ಮತ್ತು ೨ 'ಬಯೋಸ್ಫಿಯರ್ ರೆಸೆರ್ವೆಸ್' ಇವೆ. ಈ ಅನನ್ಯ ಸ್ಥಳಗಳು ಅನೇಕ ಕವಿಗಳಿಗೆ ಲೇಖಕರಿಗೆ ಸ್ಪೂರ್ಥಿ ಕೊಟ್ಟಿವೆ. ಅರ್ನೆಸ್ಟ್ ಹೆಮಿಂಗ್ವೇ ಇಂದ ಪೀಟರ್ ಮೆಥೆಐಸೆನ್, ಚಲನಚಿತ್ರ ನಿರ್ಮಾಪಕರು, ಹ್ಯೂಗೊ, ವಾನ್ ಲಾವಿಕ್ ಮತ್ತು ಅಲನ್ ರೂಟ್ ಹಾಗೂ ಹಲವಾರು ಫೋಟೋಗ್ರಾಫರ್ ಗಳಿಗೆ, ವಿಜ್ಞಾನಿಗಳಿಗೆ, ಮುದಕೊಟ್ಟ ಸ್ಥಾನ.
ವಿಶ್ವದಲ್ಲೇ ಅತಿ ಪುರಾತನ ಸ್ಥಳಗಳಲ್ಲೊಂದು. ಮಿಲಿಯಾಂತರ ವರ್ಷಗಳಿಂದ ಬದಲಾಗುತ್ತಿರುವ ಇಲ್ಲಿನ ಹವಾಮಾನ, ಇಲ್ಲಿನ ಜಲ,ಸಸ್ಯ, ಪ್ರಾಣಿ ಸಂಕುಲ ಇಂದಿನ ಜನರಿಗೆ ಅಚ್ಚರಿಗೊಳಿಸುವ ಸ್ಥಾನ. ಪುರಾತನ ಮಾನವ ಒಲ್ಡುವೈ ಗೊರ್ಗ್, ಸುಮಾರು ೨ ಮಿಲಿಯನ್ ವರ್ಷಗಳ ಹಿಂದೆ, ಜೀವಜಂತುಗಳಿರುವ ಕುರುಹುಗಳು ಕಂಡುಬಂದಿದ್ದವು.
ಸೆರಂಗೇಟಿ ವಿಶ್ವದಲ್ಲಿ ಸುಪ್ರಸಿದ್ಧವಾಗಿರುವು ಅಲ್ಲಿನ ವಲಸೆ ಪ್ರಕ್ರಿಯೆಯಿಂದಾಗಿ. ಸುಮಾರು ೧ ಮಿಲಿಯನ್ ಕೄರ ಜಂತುಗಳು ಮತ್ತು ೨ ಲಕ್ಷ ಝೀಬ್ರಗಳು ಉತ್ತರದ ಗುಡ್ಡದಿಂದ ದಕ್ಷಿಣದ ಹಚ್ಚ ಹಸುರಿನ ಹುಲ್ಲುಗಾವಲಿನ ಕಡೆಗೆ ವಲಸೆ ಹೋಗುವ ದೃಶ್ಯ ಅದ್ಭುತವಾದದ್ದು. ಅಕ್ಟೋಬರ್ ನವೆಂಬರ್ ನಲ್ಲಿ ಸ್ವಲ್ಪ ಮಳೆಯಾಗುತ್ತದೆ. ಇದೇ ಮಳೆ, ಪಶ್ಚಿಮಕ್ಕೆ, ಉತ್ತರಕ್ಕೆ ಹಬ್ಬಿ ಅತಿ ವೃಷ್ಟಿ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನಲ್ಲಿ ಸುರಿಯುತ್ತದೆ. ಆಗ ಇಲ್ಲಿನ ೨೦ ಲಕ್ಷಕ್ಕಿಂತಾ ಅಧಿಕ ಪ್ರಾಣಿಗಳು ಹಲವಾರು ಭಾಗಗಳಿಗೆ,ಮೇವಿಗಾಗಿ, ನೀರಿಗಾಗಿ ಸುತ್ತಾಡುತ್ತಾ ಹೋಗುತ್ತವೆ. ಹುಲ್ಲುಗಾವಲುಗಳು ಬೆಟ್ಟಗಳು,ಕಾಡುಪ್ರದೇಶ, ಒಂದು ನಿರ್ದಿಷ್ಟ ದಾರಿಯಲ್ಲಿ ಸುಮಾರು ೧ ಸಾವಿರ ಕಿ.ಮೀ ದೂರ ಕ್ರಮಿಸಿ ಮರು ವರ್ಷ ಅದೇ ಮಾರ್ಗದಲ್ಲಿ ಬಂದು ಸೇರುತ್ತವೆ. ನದಿಗಳನ್ನು ದಾಟುವಾಗ ಅಲ್ಲಿನ ಮೊಸಳೆಗಳಿಗೆ ನೂರಾರು ಪ್ರಾಣಿಗಳು ಬಲಿಯಾಗುತ್ತವೆ. ಭಾಗವಹಿಸುವ ಜೀವಜಂತುಗಳಲ್ಲಿ, ಕಾಡೆಮ್ಮೆ, ಕೆಲವು ಜಾತಿಯ ಜಿಂಕೆಗಳು, ಝೀಬ್ರಗಳು, ಕಾಡುಕೋಣಗಳು ಪ್ರಮುಖವಾದವುಗಳು. ಯಾವುದೇ ಒಂದು ಪ್ರದೇಶದಲ್ಲಿ ಈ ವನ್ಯ ಮೃಗಗಳು ೧ ತಿಂಗಳಿಗಿಂತ ಹೆಚ್ಚು ಸಮಯ ಕಳೆಯುವುದಿಲ್ಲ.
ಸಾಮಾನ್ಯವಾಗಿ ಈ ಪ್ರಾಣಿಗಳು, ’ಮಾರಾನದಿ’ಯನ್ನು ದಾಟಿ, ಅಕ್ಟೋಬರ್ ತಿಂಗಳಿನಲ್ಲಿ ಉತ್ತರದ ಗುಡ್ಡಗಾಡಿನಿಂದ ದಕ್ಷಿಣದ ಸಮತಟ್ಟಾದ ಹುಲ್ಲುಗಾವಲಿನ ಪ್ರದೇಶಕ್ಕೆ ಬರುತ್ತವೆ. ಪುನಃ ಏಪ್ರಿಲ್ ತಿಂಗಳಿನ ನಂತರ, ಅವೆಲ್ಲಾ ಪಶ್ಚಿಮ ಭಾಗದಿಂದ ಉತ್ತರಕ್ಕೆ ವಲಸೆ ಹೋಗುತ್ತವೆ. ಈ ಪ್ರಕ್ರಿಯೆಗೆ 'ವೃತ್ತಾಕಾರದ ವಲಸೆ'ಯೆಂದು ಕರೆಯುತ್ತಾರೆ. (Clockwise circular migration) ಈ ವಲಸೆಯ ವೇಳೆಯಲ್ಲಿ ಕೄರಮೃಗಗಳಿಗೆ ಆಹಾರವಾಗುವ ಇಲ್ಲವೇ ಸಾಯುವ ಪ್ರಾಣಿಗಳ ಸಂಖ್ಯೆ ೨ ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಹಸಿವು, ಬಾಯಾರಿಕೆ, ದಣಿವುಗಳಿಂದ ವೃದ್ಧ ಪ್ರಾಣಿಗಳು ಹಾಗೂ ಎಳೆವಯಸ್ಸಿನ ಪ್ರಾಣಿಗಳು ಜೀವ ಬಿಡುತ್ತವೆ. ಈ ವಲಸೆಯನ್ನೇ ಪ್ರಧಾನವಸ್ತುವನ್ನಾಗಿರಿಸಿಕೊಂಡು ನಿರ್ಮಿಸಿದ ಚಲನಚಿತ್ರ 'Africa the Serengeti' ಯಲ್ಲಿ ನಾವು ಈ ಸಂಗತಿಗಳನ್ನು ಕಾಣಬಹುದು. ಕೀನ್ಯ ಹಾಗೂ ಟಾಂಜಾನಿಯದ ಸರ್ಕಾರಗಳು ವಿಶೇಷ ಕಾಳಜಿ ವಹಿಸಿ ಮಾನವ ಚಟುವಟಿಕೆಗಳನ್ನು ನಿಶೇಧಿಸುವ ಕಾನೂನನ್ನು ಜಾರಿಯಲ್ಲಿ ತಂದಿದ್ದಾರೆ. ಸೆರೆಂಗೇಟಿ ಅರಣ್ಯವನ್ನು ಅಭಯಾರಣ್ಯ ವೆಂದು ಘೋಷಿಸಲಾಗಿದೆ. ಇಲ್ಲಿನ ಸುತ್ತಮುತ್ತಲ ಕೆಲವು ಕೆಲವು ಪ್ರದೇಶಗಳು ಬೆಂಗಾಡಾಗಿರುವ ಕಾರಣ ’ಓಲ್ ಡೋನ್ಯೋ ಲೆಂಗ್ಡಾ' ಎಂಬ, ಜೀವಂತ-ಅಗ್ನಿಪರ್ವತವಿರುವುದರಿಂದ.
'ಸೆರಂಗೇಟಿ ಕಾಡು', ಸಮುದ್ರ ಮಟ್ಟಕ್ಕಿಂತ ೯೨೦ ಮೀ ನಿಂದ ೧,೮೫೦ ಮೀ ಎತ್ತರದ ತನಕ ಪ್ರದೇಶಗಳಿವೆ. ಉಷ್ಣತೆ ೧೫ ಡಿಗ್ರಿ ಯಿಂಅ ೨೦ ಡಿಗ್ರಿಯವರೆಗೆ ವ್ಯತ್ಯಾಸವಿರುತ್ತದೆ. ಎರಡುಬಾರಿ ಮಳೆಗಾಲ. ಗೊರೋ ಗೋರೊ ನಲ್ಲಿ ಸುಮಾರು ೪೭ ಅಂಗುಲ, ತಗ್ಗುಪ್ರದೇಶವಾದ ಲೀಯಲ್ಲಿ ೨೦ ಅಂಗುಲ ಸಮೃದ್ಧಿಯಾಗಿ ಹುಲ್ಲು ಬೆಳೆಯುತ್ತದೆ. ವಲಸೆ, ಆಯಾ ಪ್ರದೇಶದ ವಾತಾವರಣದ, ಬದಲಾವಣೆಯನ್ನನುಸರಿಸಿ, ಮಳೆ, ಗುಡ್ಡದಲ್ಲಿ ಹತ್ತಿ ಉರಿಯುವ ಬೆಂಕಿಯ ಜ್ವಾಲೆಗಳನ್ನು ಅನುಸರಿಸಿ ನಡೆಯುತ್ತದೆ. ಆದರೆ, ವಲಸೆಯ ದಾರಿ ಮಾತ್ರ ಒಂದೇ. ಈ ದೃಷ್ಯವನ್ನು ವೀಕ್ಷಿಸಲು ವಿಶ್ವದೆಲ್ಲೆಡೆಯಿಂದ ಲಕ್ಷಗಟ್ಟಲೆ ಜನ ಬರುತ್ತಾರೆ.
ಈ ಎರಡೂ ನದಿಗಳು ದೊಡ್ಡವು. ಅವುಗಳಲ್ಲಿ ಸಾವಿರಾರು ಮೊಸಳೆಗಳು ಇರುತ್ತವೆ. ಪ್ರಾಣಿಗಳು ನದಿಯನ್ನು ದಾಟುವಾಗ ಒಟ್ಟಾಗಿ ಹೋಗುತ್ತವೆ. ಆದರೂ ಮೊಸಳೆಗಳು ಸಮಯ ಕಾದಿದ್ದು ಚಿಕ್ಕ ಮರಿಗಳನ್ನು ಮತ್ತು ವಯಸ್ಸಾದ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ.
ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯ, ಫೆಬ್ರವರಿ ತಿಂಗಳು. ದಕ್ಷಿಣದಲ್ಲಿ ಆಗ, ಸಾವಿರಾರು ಪ್ರಾಣಿಗಳಿಗೆ ಕರುಹಾಕುವ ಸಮಯ. ಸಿಂಹ, ಚಿರತೆ, ಹೈನಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇಟೆಯಾಡಿ ತಿನ್ನುತ್ತವೆ. ಮಳೆ ಇಲ್ಲದ ಸಮಯವನ್ನು ಆರಿಸಿಕೊಳ್ಳುವುದು ಅತಿ ಮುಖ್ಯ. ಈ ವಲಸೆಯನ್ನು ವರ್ಣಿಸುತ್ತಾ, ಮಾರ್ಕಸ್ ಬೋರ್ನರ್ ಅಧ್ಯಯನ ನಡೆಸುತ್ತಿದ್ದಾರೆ. ಈ ತರಹದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಾ ಪ್ರಾಣಿಗಳ ವಲಸೆಯಲ್ಲಿ, "ಪ್ರಾಣಿಗಳು ಮೊಸಳೆಗಳಿರುವ ನದಿಗಳನ್ನು ದಾಟುವಾಗ ಮಾಡಿಕೊಳ್ಳುವ ಗುಂಪುಗಳು, ಅವುಗಳ ಮುಖದಲ್ಲಿ ಕಾಣುವ ಆತಂಕ, ಮೊಸಳೆಗಳ ಸಂಭ್ರಮ,ಪ್ರಕೃತಿಯ ಸಹಜ ಸನ್ನಿವೇಶ ಮುದಕೊಟ್ಟರೂ, ಪ್ರಾಣಿಗಳ ಸಂಕಟ ನೋಡುವಾಗ ಕರುಳು ಕಿತ್ತುಬರುತ್ತದೆ," ಎನ್ನುತ್ತಾರೆ ಅವರು.