ಮೂಲತಃ ದಿಲ್ಲಿ ಮೃಗಾಲಯ ಎಂದು ಕರೆಯಲ್ಪಟ್ಟ ಈಗಿನ ನ್ಯಾಷನಲ್ ಜೂವಲಾಜಿಕಲ್ ಪಾರ್ಕ್ ಭಾರತದ ರಾಜಧಾನಿಯಾದ ದೆಹಲಿಯ ಹಳೇ ಕೋಟೆಯ ಮುಂದೆ ಸುಮಾರು ೧೭೬ ಎಕರೆಯಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಬೆಂಗಳೂರಿನಿಂದ ಸುಮಾರು ೩೨ ಗಂಟೆಗಳ ರೈಲು ಪ್ರಯಾಣ ಅಥವ ವಿಮಾನದಲ್ಲಿ ಎರಡೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ೧೬ನೇ ಶತಮಾನದ ಕೋಟೆ, ವಿಸ್ತಾರವಾದ ಹಸಿರು ಐಲೆಂಡ್ ಹಾಗೂ ಅಪಾರ ಪ್ರಾಣಿ- ಪಕ್ಷಿಗಳ ಸಂಗ್ರಹ ಇವೆಲ್ಲವು ಆರ್ಥಿಕವಾಗಿ ಬೆಳೆಯುತ್ತಿರುವ ದೆಹಲಿ ನಗರದ ಮಧ್ಯದಲ್ಲಿ ನೆಲೆಗೊಂಡಿರುವುದು ಈ ಮೃಗಾಲಯದ ವಿಶೇಷ. ಈ ಮೃಗಾಲಯವು ೧೩೫೦ ಪ್ರಾಣಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ಒಟ್ಟಾರೆ ಪ್ರಪಂಚದಲ್ಲಿರುವ ವಿವಿಧ ಜಾತಿ-ಪ್ರಭೇದದ ಪ್ರಾಣಿ-ಪಕ್ಷಿಗಳ ಪೈಕಿ ಅಂದಾಜು 130 ವಿವಿಧ ಜಾತಿಯ ಪ್ರಾಣಿ ಹಾಗೂ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರಸ್ತುತ ಶ್ರೀ ಅಮಿತಾಭ್ ಅಗ್ನಿಹೋತ್ರಿಯವರು ಮೃಗಾಲಯದ ಕಾರ್ಯ- ನಿರ್ದೇಶಕರು. ಮೃಗಾಲಯವನ್ನು ಕಾಲ್ನಡಿಗೆಯ ಮೂಲಕ ಅಥವಾ ಅಲ್ಲಿ ಬಾಡಿಗೆಗೆ ಲಭ್ಯವಿರುವ ಬ್ಯಾಟರಿ ಚಾಲಿತ ವಾಹನಗಳ ಮೂಲಕ ನೋಡಬಹುದು. ಪ್ರವಾಸಿಗರು ಕುಡಿಯುವ ನೀರನ್ನು ಬಿಟ್ಟು ಬೇರೆ ಯಾವುದೇ ತರಹದ ತಿಂಡಿ- ತಿನಿಸುಗಳನ್ನು ಮೃಗಾಲಯದ ಒಳಗೆ ತರಲು ಅನುಮತಿ ಇಲ್ಲ ಆದರೆ ಮೃಗಾಲಯದ ಒಳಗೆ ಕ್ಯಾಂಟೀನ್ ಸೌಲಭ್ಯವಿದೆ, ಎಲ್ಲಾ ಬಗೆಯ ತಿಂಡಿ- ತಿನಿಸುಗಳು ಇಲ್ಲಿ ದೊರೆಯುತ್ತದೆ. ೨೦೧೪ ರಲ್ಲಿ ಒಬ್ಬ ಪ್ರವಾಸಿಗ ಬಿಳಿ ಹುಲಿಯ ಆವರಣದಲ್ಲಿ ಸಿಕ್ಕಿಕ್ಕೊಂಡಿದ್ದ ಎಂಬ ಸುದ್ದಿ ಇದೆ. ಈ ಘಟನೆಯು ಪ್ರವಾಸಿಗರ ಹಾಗು ಮೃಗಾಲಯದ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಹೊಸ ದಿಲ್ಲಿ ನಿರ್ಮಿಸಿದ ಹತ್ತು ವರ್ಷಗಳ ನಂತರ ದೆಹಲಿ ಮೃಗಾಲಯವು ಸ್ಥಾಪಿಸಲ್ಪಟ್ಟಿತು. ರಾಷ್ಟ್ರೀಯ ರಾಜಧಾನಿಯಲ್ಲಿ ಒಂದು ಮೃಗಾಲಯವನ್ನು ಸ್ಥಾಪಿಸಬೇಕೆಂಬ ಆಲೋಚನೆ ೧೯೫೧ರಲ್ಲಿ ಪ್ರಸ್ಥಾಪಿಸಲಾಗಿತ್ತು, ನಂತರ ೧೯೫೯ರಲ್ಲಿ ಮೃಗಾಲಯದ ಉದ್ಘಾಟನೆವಾಯಿತು. ೧೯೫೨ರಲ್ಲಿ ಭಾರತೀಯ ವನ್ಯಜೀವಿ ಮಂಡಳಿಯು ದಿಲ್ಲಿಯಲ್ಲಿ ಪ್ರಾಣಿಸಂಗ್ರಹಾಲಯವನ್ನು ಸ್ಥ್ಹಾಪಿಸಲು ಒಂದು ಸಮಿತಿಯನ್ನು ರಚಿಸಿದ್ದರು. ಮೊದಲಿಗೆ ಭಾರತ ಸರ್ಕಾರವು ಮೃಗಾಲಯವನ್ನು ಅಭಿವೃದ್ದಿಗೊಳಿಸಿದ ನಂತರ ಅದನ್ನು ದಿಲ್ಲಿ ಸರ್ಕಾರದ ಆಡಳಿತ್ತಕ್ಕೆ ಹಿಂದಿರುಗಿಸಬೇಕಿತ್ತು. ೧೯೫೩ ರಲ್ಲಿ ಸಮಿತಿಯು ಮೃಗಾಲಯದ ಸ್ಥಳವನ್ನು ಅನುಮೋದಿಸಿತು, ಮತ್ತು ೧೯೫೫ ಅಕ್ಟೋಬರಿನಲ್ಲಿ ಸಮಿತಿಯು ಭಾರತೀಯ ಅರಣ್ಯ ಸರ್ವೀಸಿನ ಎನ್.ಡಿ.ಬಚಕೇತಿ ಅವರನ್ನು ಮೃಗಾಲಯದ ಸ್ಥಾಪನೆಯ ಮೇಲ್ವಿಚಾರಕರಾಗಿ ನೇಮಿಸಿತು. ಮೊದಲಿಗೆ ಪ್ರಾಣಿಸಂಗ್ರಹಾಲಯದ ಮಾದರಿ ನಕ್ಷೆಯನ್ನು ತಯಾರಿಸಲು ಸಿಲೋನ್ನಿನ ಪ್ರಾಣಿ ಸಂಗ್ರಹಾಲದ ಮೇಜರ್ ಔಬ್ರೆ ವೀನ್ಮನ್ ಅವರ ಸಹಾಯ ಕೋರಲಾಯಿತು. ಆದರೆ, ಅವರ ಸಹಾಯ ಅಲ್ಪಾವಧಿಗೆ ಮಾತ್ರ ದೊರೆತ ಕಾರಣ ಹ್ಯಾಂಬರ್ಗ್ ಪ್ರಾಣಿಸಂಗ್ರಹಾಲಯದ ಕಾರ್ಲ್ ಹೇಗನ್ ಬ್ಯಾಕ್ ಅವರನ್ನು ನೇಮಕ ಮಾಡಿಕೊಳ್ಳಲಾಯಿತು. ೧೯೫೬ ಮಾರ್ಚಿನಲ್ಲಿ ಹೇಗನ್ ಬ್ಯಾಕ್ ಅವರು ಸಂಗ್ರಹಾಲಯದ ಮಾದರಿ ನಕ್ಷೆಯೊಂದನ್ನು ತಯಾರಿಸಿಕೊಟ್ಟರು. ಹೊಸ ಪ್ರಾಣಿಸಂಗ್ರಹಾಲಯಕ್ಕಾಗಿ ಈ ನಕ್ಷೆಯನ್ನು ಸ್ಥಳೀಯ ಹವಮಾನಕ್ಕನುಗುಣವಾಗಿ ಮಾರ್ಪಾಡು ಮಾಡಿದ ನಂತರ ಭಾರತ ಸರ್ಕಾರ ಈ ನಕ್ಷೆಯನ್ನು ಅನುಮೋದಿಸಿತು. ೧೯೫೯ನೇ ವರ್ಷದ ಕೊನೆಯಲ್ಲಿ ಮೃಗಾಲಯದ ಉತ್ತರಭಾಗದ ಕಾಮಗಾರಿಯು ಪೂರ್ಣಗೊಂಡಿತ್ತು. ಮೃಗಾಲಯಕ್ಕೆ ಆಮದು ಮಾಡಿಕೊಂಡಿದ್ದ ಪ್ರಾಣಿಗಳು ಮತ್ತು ತಾತ್ಕಾಲಿಕ ಗೃಹಗಳಲ್ಲಿದ್ದ ಪ್ರಾಣಿಗಳನ್ನು ಶಾಶ್ವತವಾಗಿ ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತು. ೧೯೫೯ ನವೆಂಬರ್ ೧ರಂದು ಈ ಮೃಗಾಲಯಕ್ಕೆ ದಿಲ್ಲಿ ಮೃಗಾಲಯವೆಂದು ಹೆಸರಿಸಿ ಉದ್ಘಾಟನೆ ಮಾಡಲಾಯಿತು. ಈ ಮೃಗಾಲಯವು ದೇಶದ ಇತರೆ ಮೃಗಾಲಯಗಳಿಗೆ ಒಂದು ಉತ್ತಮ ಮಾದರಿಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ೧೯೮೨ರಲ್ಲಿ ದಿಲ್ಲಿ ಮೃಗಾಲಯವನ್ನು ನ್ಯಾಷನಲ್ ಜೂವಲಾಜಿಕಲ್ ಪಾರ್ಕ್ ಎಂದು ಮರುನಾಮಕರಿಸಿ ಅದನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.
ವನ ಹಾಗೂ ವನಜೀವಿಗಳ ಸಂರಕ್ಷಣೆ ಬಗ್ಗೆ ಇಲ್ಲಿಗೆ ಭೇಟಿ ನೀಡುವವರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವುದೇ ಈ ಮೃಗಾಲಯದ ಮುಖ್ಯ ಗುರಿಯಾಗಿದೆ.
ಇಲ್ಲಿ ಚಿಂಪಾಂಜೀ, ಸ್ಪೈಡರ್ ಮಂಕಿ, ಆಫ್ರಿಕಾ ದೇಶದ ವೈಲ್ಡ್ ಬಫೆಲೋ(ಎಮ್ಮೆ), ಗಿರ್ ಸಿಂಹ, ಮ್ಯಾಕಾಕ್ವೀ, ಬಂಟಿಂಗ್, ವಿವಿಧ ಜಾತಿಯ ಜಿಂಕೆಗಳು ಹಾಗೂ ಅನೇಕ ಕಾಡು ಮೃಗಗಳು, ಪಕ್ಷಿಗಳು ಮತ್ತು ಜಲಚರಗಳಿವೆ. ಈ ಮೃಗಾಲಯದಲ್ಲಿ ಸರ್ಪ ಹಾಗೂ ಇತರೆ ಸರೀಸೃಪಗಳಿಗೆ ಸುರಂಗಗಳಲ್ಲಿ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ವಿವಿಧ ಬಗೆ ಬಗೆಯ ಸರ್ಪ ಹಾಗೂ ಸರೀಸೃಪಗಳನ್ನು ಕಾಣಬಹುದು.ಈ ಮೃಗಾಲಯ ಕೂಡ ಕೇಂದ್ರೀಯ ಮೃಗಾಲಯದ ಪ್ರಾಧಿಕಾರಕ್ಕೆ ಒಳಪಟ್ಟಿದ್ದು ರಾಯಲ್ ಬೆಂಗಾಲಿ ಟೈಗರ್, ಭಾರತದ ಘೇಂಡಾಮೃಗ, ಸ್ವಾಂಪ್ ಡೀರ್, ಏಶಿಯಾದ ಸಿಂಹ, ಬ್ರೋ ಆಂಟಿಲ್ ಡೀರ್ ಹಾಗೂ ಕಾಡಿನ ಕೆಂಪು ಹುಂಜವನ್ನು ಇಲ್ಲಿ ವಿಶೇಷವಾಗಿ ಸಂರಕ್ಷಿಸಲಾಗಿದೆ. ಈ ಸಂರಕ್ಷಣೆಯು ಯಶಸ್ವಿಯಾಗಿದ್ದು ಬ್ರೋ ಆಂಟಿಲ್ ಡೀರ್ ಎಂಬ ಪ್ರಾಣಿಯನ್ನು ಅಹಮದಾಬಾದ್,ಕಾನ್ ಪುರ್,ಲಕ್ನೋ, ಹೈದಿರಾಬಾದ್,ಜುನಾಗಢ್ ಮತ್ತು ಮೈಸೂರು ಮೃಗಾಲಯಗಳಿಗೆ ವಿತರಿಸಲಾಗಿದೆ. ಇಷ್ಟೇ ಅಲ್ಲದೆ ಮೃಗಾಲಯದಲ್ಲಿ ಒಂದು ಪಕ್ಷಿಧಾಮವಿದೆ, ಇಲ್ಲಿ ಹಲವಾರು ಜಾತಿಯ ಪಕ್ಷಿಗಳನ್ನು ಸಂರಕ್ಷಿಸಲಾಗಿದೆ.
ಶುಕ್ರವಾರ ಬಿಟ್ಟು ವಾರದ ಎಲ್ಲಾ ದಿನಗಳೂ ಮೃಗಾಲಯವು ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಬೇಸಿಗೆ ಕಾಲದಲ್ಲಿ ಬೆಳಗ್ಗೆ ೮:೩೦ ರಿಂದ ಸಂಜೆ ೫:೩೦ ರವರೆಗೆ, ಚಳಿಗಾಲದಲ್ಲಿ ಬೆಳಗ್ಗೆ ೯:೩೦ ರಿಂದ ಸಂಜೆ ೪:೩೦ ರ ವರೆಗೆ ಮಾತ್ರ ತೆರೆದಿರುತ್ತದೆ, ಇಲ್ಲಿ ಪ್ರವೇಶ ದರ ಭಾರತಿಯರಿಗೆ ೫ ರೂ. ಹಾಗೂ ವಿದೇಶಿಯರಿಗೆ ೧೦೦ ನಿಗದಿ ಪಡಿಸಲಾಗಿದೆ. ಮೃಗಾಲಯದ ಒಳಗೆ ಲಘು ಉಪಹಾರ, ಕಾಫಿ-ಟೀ ಲಭ್ಯವಿರುತ್ತದೆ ಹಾಗೂ ಒಳಗೆ ನಡೆದುಕೊಂಡು ಸುತ್ತಾಡಲು ಸಾಧ್ಯವಾಗದವರಿಗಾಗಿ ಪುಟ್ಟ ವಾಹನದ ವ್ಯವಸ್ಥೆಯು ಕೂಡ ಇಲ್ಲಿದೆ ಹಾಗು ಅಂಗವಿಕಲರಿಗೆ ಉಚಿತ ಗಾಲಿಕುರ್ಚಿಗಳನ್ನು ನೀಡಲಾಗುತ್ತದೆ.ಪ್ರಾಣಿಗಳಿಗೆ ಆಹಾರವನ್ನು ತಿನ್ನಿಸುವುದು ಮತ್ತು ಅವುಗಳನ್ನು ಅನುಕರಣೆ ಮಾಡುವುದನ್ನು ಇಲ್ಲಿ ನಿಷೇದಿಸಲಾಗಿದೆ. ೨೦೧೪ರ ಸೆಪ್ಟೆಂಬರ್ ೨೩ರಂದು ಮಸೂದ್ ಎಂಬ ವ್ಯಕ್ತಿಯು ಒಂದು ಬಿಳಿಯ ಹುಲಿಯ ಗುಹೆಯ ಆವರಣದಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡನು, ಆಗ ಅಲ್ಲಿದ್ದ ಜನರು ಆ ಹುಲಿಯ ಕಡೆಗೆ ಕಲ್ಲುಗಳನ್ನು ಎಸೆಯಲು ಆರಂಭಿಸಿದರು. ಇದರ ಪರಿಣಾಮವಾಗಿ ಕುಪಿತಗೊಂಡ ಹುಲಿಯು ಆ ಮನುಷ್ಯನನ್ನು ಎಳೆದುಕೊಂಡು ಹೋಗಿ ಅವನ ಮೇಲೆ ತನ್ನ ಬಲಪ್ರದರ್ಶನ ನಡೆಸಿತು. ನಂತರ ಆತ ಹೇಗೋ ಹುಲಿಯಿಂದ ಗಾಯಗೊಂಡು ಅದರ ಕಪಿಮುಷ್ಠಿಯಿಂದ ಪಾರಾದ.