ಕೆಂಪು ಕೋಟೆ ದೆಹಲಿಯ ಸಮೀಪ ಆಗ್ರಾ ನಗರದಲ್ಲಿ ಇದೆ. ಪ್ರಸಿದ್ಧ ತಾಜ್ ಮಹಲ್ ಇಂದ ೨.೫ ಕಿಮೀ ದೂರದಲ್ಲಿದೆ. ಕೆಂಪು ಕೋಟೆ ನಿಜವಾಗಿ ಕೋಟೆಯಿಂದ ಸುತ್ತುವರಿದ ಅರಮನೆಗಳ ನಗರ ಎನ್ನಬಹುದು.
೧೬ ನೆಯ ಶತಮಾನದ ಕೊನೆಯಲ್ಲಿ ಅಕ್ಬರನ ಕಾಲದಲ್ಲಿ ಮೊಘಲರು ಈ ಕೋಟೆಯನ್ನು ಲೋದಿ ವಂಶದಿಂದ ಪಡೆದರು. ಅಕ್ಬರ್ ತನ್ನ ಆಡಳಿತದ ಸಮಯದಲ್ಲಿ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿದನು. ಇದರಿಂದಾಗಿ ಆಗ್ರಾ ನಗರ ಹೆಚ್ಚು ಸಮೃದ್ಧವಾಯಿತೆನ್ನಬಹುದು. ಅಕ್ಬರ್ ಸಾಮಾನ್ಯವಾಗಿ ಕೋಟೆ-ಕಟ್ಟಡಗಳನ್ನು ಕಟ್ಟಿಸುತ್ತಿದ್ದದ್ದು ಕೆಂಬಣ್ಣದ ಕಲ್ಲಿನಿಂದ, ಮತ್ತು ಕೆಂಪು ಕೋಟೆಯಲ್ಲಿಯೂ ಇದೇ ಪ್ರಭಾವವನ್ನು ಕಾಣಬಹುದು. ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೆ ರಾಜ-ರಾಣಿಯರ ನಿವಾಸವಾಗಿಯೂ ಉಪಯೋಗಗೊಳ್ಳಲಾರಂಭಿಸಿತು.
ಕೆಂಪು ಕೋಟೆ ತನ್ನ ಇಂದಿನ ರೂಪ ಪಡೆದದ್ದು ಅಕ್ಬರನ ಮೊಮ್ಮಗ ಷಾ ಜಹಾನನ ಕಾಲದಲ್ಲಿ. ಷಾ ಜಹಾನ್ ನ ಕಾಲದ ಶಿಲ್ಪಕಲೆ ಶ್ವೇತ ಅಮೃತಶಿಲೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿತ್ತು (ಉದಾಹರಣೆಗೆ ತಾಜ್ ಮಹಲ್). ಷಾ ಜಹಾನ್ ಇಲ್ಲಿದ್ದ ಕೆಲವು ಕಟ್ಟಡಗಳನ್ನು ಉರುಳಿಸಿ ತನ್ನವೇ ಆದ ಹೊಸ ಕಟ್ಟಡಗಳನ್ನು ನಿರ್ಮಿಸಲು ಆರಂಭಿಸಿದ.
ನಂತರದ ವರ್ಷಗಳಲ್ಲಿ ಷಾ ಜಹಾನ್ ನ ಮಗ ಔರಂಗಜೇಬ್ ಷಾ ಜಹಾನನನ್ನು ಇದೇ ಕೆಂಪು ಕೋಟೆಯಲ್ಲಿ ಬಂಧನದಲ್ಲಿರಿಸಿದ. ನಂಬಿಕೆಯಂತೆ, ಷಾ ಜಹಾನ್ ನಿಧನನಾಗಿದ್ದು ಕೆಂಪು ಕೋಟೆಯ ಮುಸಮ್ಮನ್ ಬುರ್ಜ್ ಎಂಬ ಗೋಪುರದಲ್ಲಿ - ಇದು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು ತಾಜ್ ಮಹಲ್ ನ ಅದ್ಭುತ ದೃಶ್ಯ ಇಲ್ಲಿಗೆ ಕಾಣುತ್ತದೆ.
೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಯುದ್ಧ ಇದೇ ಸ್ಥಳದಲ್ಲಿ ಜರುಗಿತು.
ಇಡೀ ಕೋಟೆ ಅರ್ಧಚಂದ್ರಾಕಾರವಾಗಿದ್ದು, ಕೋಟೆ ಗೋಡೆಗಳು ೨೧ ಮೀ ಎತ್ತರ ಇವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಮುಖ್ಯ ದ್ವಾರ (ದೆಹಲಿ ದ್ವಾರ) ಯಮುನಾ ನದಿಯ ಕಡೆಗಿದೆ. ಕೋಟೆಯ ಸುತ್ತಳತೆ ೨.೪ ಕಿಮೀ.
ಕೋಟೆಯಲ್ಲಿ ಎರಡು ದ್ವಾರಗಳಿವೆ - ದೆಹಲಿ ದ್ವಾರ ಮತ್ತು ಲಾಹೋರ್ ದ್ವಾರ (ಅಥವಾ ಅಮರ್ ಸಿಂಗ್ ದ್ವಾರ). ದೆಹಲಿ ದ್ವಾರ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಕೋಟೆಯ ಈ ಭಾಗವನ್ನು ಉಪಯೋಗಿಸುವುದರಿಂದ ಈ ದ್ವಾರ ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಪ್ರವಾಸಿಗಳು ಸಾಮಾನ್ಯವಾಗಿ ಉಪಯೋಗಿಸುವುದು ಲಾಹೋರ್ ದ್ವಾರವನ್ನು (ಲಾಹೋರ್ ನ ಕಡೆ ಮುಖ ಮಾಡಿರುವುದರಿಂದ ಈ ಹೆಸರು).
ಶಿಲ್ಪಕಲೆಯ ದೃಷ್ಟಿಯಿಂದ ಈ ಕೋಟೆಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಶೈಲಿಗಳ ಸಮಾಗಮವನ್ನು ಕಾಣಬಹುದು. ಒಟ್ಟಾರೆ ಶಿಲ್ಪಕಲೆ ಮುಸ್ಲಿಮ್ ಶೈಲಿಗಳಿಂದ ಸ್ಫೂರ್ತಿ ಪಡೆದಿದ್ದರೂ, ಕೆಲವು ಅಲಂಕಾರಗಳಲ್ಲಿ ಹಿಂದೂ ಶಿಲ್ಪಕಲೆಯ ಪ್ರಭಾವವನ್ನು ಕಾಣಬಹುದು.
ಆಗಸ್ಟ್ ೧೫ ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿಗಳ ಭಾಷಣ ನಡೆಯುವುದು ಕೆಂಪು ಕೋಟೆಯಲ್ಲಿಯೇ. ಇದೇ ದಿನ ಭಾರತೀಯ ಸೈನ್ಯದ ಅನೇಕ ತುಕಡಿಗಳು ಇಲ್ಲಿ ಪ್ರಭಾತಭೇರಿ (ಪೆರೇಡ್) ನಡೆಸುತ್ತವೆ. ಹಾಗೆಯೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಸಾಂಸ್ಕೃತಿಕ ಪ್ರದರ್ಶನಗಳ ಮೆರವಣಿಗೆ ನಡೆಯುತ್ತದೆ. ಇದೇ ಸಂದರ್ಭದಲ್ಲಿಯೇ ಭಾರತದ ರಕ್ಷಣೆಗೆ ಅತ್ಯುನ್ನತ ಸೇವೆ ನೀಡಿದ ಸೈನಿಕರಿಗೆ ಪರಮ್ ವೀರ್ ಚಕ್ರ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ.
೧೯೮೩ ರಲ್ಲಿ ಯುನೆಸ್ಕೋ ಈ ಕೋಟೆಯನ್ನು ಪ್ರಪಂಚ ಸಂಸ್ಕೃತಿ ಕ್ಷೇತ್ರ ಎಂದು ಘೋಷಿಸಿತು.